ಜ್ಞಾನವೇ ಜಗತ್ತಿನ ಶ್ರೇಷ್ಠ ಸಂಪತ್ತು : ವಿಪ ಸದಸ್ಯ ಸುನೀಲಗೌಡ ಪಾಟೀಲ

Feb 4, 2025 - 10:34
Feb 4, 2025 - 11:04
 0
ಜ್ಞಾನವೇ ಜಗತ್ತಿನ ಶ್ರೇಷ್ಠ ಸಂಪತ್ತು : ವಿಪ ಸದಸ್ಯ ಸುನೀಲಗೌಡ ಪಾಟೀಲ

ವಿಜಯಪುರ : ಜಗತ್ತಿನ ಪ್ರತಿಯೊಂದು ಅಂಶವು ಜ್ಞಾನದ ಮೇಲೆ ನಿಂತಿದೆ.ಜ್ಞಾನಕ್ಕಿಂತ ಪವಿತ್ರವಾದುದು ಈ ಜಗತ್ತಿನಲ್ಲಿ ಬೇರೆ ಯಾವುದು ಇಲ್ಲ ಎಂದು ವಿಧಾನ ಪರಿಷತ್ ಸದಸ್ಯ ಸುನಿಲಗೌಡ .ಬಿ.ಪಾಟೀಲ ಹೇಳಿದರು.

ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಸಮನ್ವಯ ಆಂಗ್ಲ ಮಾಧ್ಯಮ ಹಾಗೂ ಎಸ್.ಎಸ್.ಪ್ರಾಥಮಿಕ ಕನ್ನಡ ಮಾಧ್ಯಮ ಶಾಲೆಯಲ್ಲಿ ಏರ್ಪಡಿಸಿದ " ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಮಕ್ಕಳ ಹಬ್ಬ" ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು,ನಮ್ಮ ಮಕ್ಕಳು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಅಕ್ಷರದ ಜೊತೆಗೆ  ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ ಅವರಲ್ಲಿ ಅಡಕವಾಗಿರುವ ಸೂಪ್ತ ಪ್ರತಿಭೆಯನ್ನು ಹೊರಹಾಕುವುದು ಬಹಳ ಅವಶ್ಯವಾಗಿದೆ.ಎರಡು ಕೈ ಸೇರಿದರೆ ಮಾತ್ರ ಚಪ್ಪಾಳೆ ಆಗುವುದು.ಅಂತೆಯೇ ಪಾಲಕರು ಶಿಕ್ಷಕರ ಜೊತೆ ಸೇರಿ ಅವರ ಸರ್ವತೋಮುಖ ಅಭಿವೃದ್ಧಿಗೆ ಸಹಕರಿಸಬೇಕು  ಎಂದು ಕರೆ ನೀಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಧಾರವಾಡದ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ  ಸಂಗಮೇಶ ಬಬಲೇಶ್ವರ ಮಾತನಾಡಿ,ಇಂದಿನ ನಮ್ಮ ವಿದ್ಯಾರ್ಥಿಗಳು ಜಗತ್ತಿನ ಮಾಂತ್ರಿಕ ವಸ್ತು ಹಾಗೂ ಶತ್ರುವಾದ ಮೋಬೈಲ್ ಬಳಕೆ ಮಾಡಬಾರದು.ಶಾಲೆಯಲ್ಲಿ ಶಿಕ್ಷಕರ ಹೇಳುವ ಪಾಠವನ್ನು ಚೆನ್ನಾಗಿ ಮನನ ಮಾಡಿಕೊಂಡು,ಪ್ರಶ್ನಿಸುವ ಕೌಶಲ್ಯ ಬೆಳೆಸಿಕೊಳ್ಳಬೇಕು.ಮುಂದಿನ ಜೀವನದ ಗುರಿಯ ಹೆಜ್ಜೆಯನ್ನು ಈಗಿನಿಂದಲೇ ಸಜ್ಜಾಗುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ಹೇಳಿದರು.

ಸಮಾಜ ಸೇವಕರು ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಮ್.ಬಿ.ಪಾಟೀಲರ ಧರ್ಮಪತ್ನಿ ಶ್ರೀಮತಿ ಆಶಾ.ಎಮ್.ಪಾಟೀಲ ಭಾಗವಹಿಸಿ ಮಕ್ಕಳಗೆ ಪ್ರೋತ್ಸಾಹಿಸಿದರು.

ಎಸ್.ಎಸ್ ಆವರಣದ ಆಡಳಿತಾಧಿಕಾರಿ ಶಿ ಆಯ್.ಎಸ್.ಕಾಳಪ್ಪನವರ  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಆಡಳಿತಾಧಿಕಾರಿ ಗಳಾದ  ಬಿ.ಆರ್.ಪಾಟೀಲ,ಸಂಸ್ಥೆಯ ಮುಖ್ಯ ಅಧಿಕ್ಷಕರಾದ  ಎಸ್. ಎ.ಬಿರಾದಾರ(ಕನ್ನಾಳ ಗೌಡ್ರು),ಎಸ್.ಎಸ್. ಬ ಶಾಲೆಯ ಮುಖ್ಯಗುರುಗಳಾದ  ವಿ.ಬಿ.ಪಾಟೀಲ,ಹಿರಿಯ ಶಿಕ್ಷಕಿಯರಾದ ಶ್ರೀಮತಿ ವಿ.ಎಸ್.ಬಿರಾದಾರ,ಸಮನ್ವಯ ಶಾಲೆಯ ಮುಖ್ಯ ಶಿಕ್ಷಕರಾದ  ಎಸ್.ಸಿ.ಬಿರಾದಾರ,ಪ್ರಧಾನ ಕಾರ್ಯದರ್ಶಿಗಳಾದ ಕುಮಾರಿ ವೈಶಾಲಿ ರಾಠೋಡ ಹಾಗೂ ಕುಮಾರ ಶಶಾಂಕ ಬಿರಾದಾರ,ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಸರಿಗಮಪ ಖ್ಯಾತಿಯ ಕುಮಾರಿ.ಸಾಕ್ಷಿ ಹಿರೇಮಠ ಕಾರ್ಯಕ್ರಮ ಪ್ರಮುಖ ಆಕರ್ಷಣೆ ಆಗಿದ್ದರು. ವಿವಿಧ ಪರೀಕ್ಷೆ ಹಾಗೂ ಸ್ಪರ್ಧೆಗಳಲ್ಲಿ ವಿಜೇತ ಮಕ್ಕಳಿಗೆ ಪ್ರಶಸ್ತಿ ವಿತರಿಸಲಾಯಿತು.ಅಪಾರ ಸಂಖ್ಯೆಯಲ್ಲಿ ಸೇರಿದ ಜನರು ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೋಡಿ ಖುಷಿಪಟ್ಟರು. ಶಿಕ್ಷಕರಾದ ಆರ್.ಎಸ್.ಪಟ್ಟಣಶೆಟ್ಟಿ ಸ್ವಾಗತಿಸಿದರು.ಕುಮಾರಿ ಮೇಘಾ ಗಾಡಿವಡ್ಡರ ನಿರೂಪಿಸಿದರು.ಕುಮಾರಿ ದಾನಮ್ಮ ಮಜ್ಜಗಿ ವಂದಿಸಿದರು.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.