ರಾಜ್ಯಮಟ್ಟದ ಹಂಡೇವಜೀರ ಸಮಾವೇಶ ಯಶಸ್ವಿಗೊಳಿಸಿ

ಮುದ್ದೇಬಿಹಾಳ : ಫೆ.೧ ಮತ್ತು ೨ ರಂದು ರಾಜ್ಯಮಟ್ಟದ ಹಂಡೇವಜೀರ ಸಮಾಜದ ಮೂರನೇ ಬೃಹತ್ ಸಮಾವೇಶ ಕೂಡಲಸಂಗಮದಲ್ಲಿ ಆಯೋಜಿಸಲಾಗಿದ್ದು ಸಮಾವೇಶ ಯಶಸ್ವಿಗೆ ಮುದ್ದೇಬಿಹಾಳದಿಂದ ೨೦ ಸಾವಿರಕ್ಕೂ ಅಧಿಕ ಜನರು ತೆರಳಲಿದ್ದಾರೆ ಎಂದು ವೀರಶೈವ ಹಂಡೆವಜೀರ ಸಮಾಜದ ರಾಜ್ಯ ಉಪಾಧ್ಯಕ್ಷ ಶಂಕರಗೌಡ ರಾಯಗೊಂಡ ಹೇಳಿದರು.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಅವರು ಬುಧವಾರ ಮಾತನಾಡಿದರು. ಅಖಿಲ ಕರ್ನಾಟಕ ವೀರಶೈವ ಲಿಂಗಾಯತ ಹಡೆವಜೀರ ಸಮಾಜ ಹಾಗೂ ಚಾಲುಕ್ಯ ಸಂಸ್ಕೃತಿ ಅಧ್ಯಯನ ಪೀಠದ ಸಹಯೋಗದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಬಾಗಲಕೋಟ,ವಿಜಯಪುರ ಜಿಲ್ಲೆಗಳ ಸಚಿವರು, ಶಾಸಕರು, ಮಾಜಿ ಶಾಸಕರು,ಸಮಾಜದ ಚಿಂತಕರು, ರಾಜಕೀಯ ಧುರೀಣರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಯುವ ಘಟಕದ ಜಿಲ್ಲಾಧ್ಯಕ್ಷ ನಾಗರಾಜ ತಂಗಡಗಿ(ಬಸರಕೋಡ) ಮಾತನಾಡಿ, ರಾಜ್ಯಮಟ್ಟದ ಹಂಡೆವಜೀರ ಸಮಾಜದ ಸಮಾವೇಶದಲ್ಲಿ ವಿಚಾರ ಸಂಕಿರಣ, ಗ್ರಂಥಗಳ ಲೋಕಾರ್ಪಣೆ, ಪ್ರತಿಭಾಪುರಸ್ಕಾರ ಹಾಗೂ ಸಾಧಕರ ಸನ್ಮಾನ ಹಂಡೆಸಿರಿ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ತಿಳಿಸಿದರು.
ಸಮಾಜದ ತಾಲ್ಲೂಕು ಅಧ್ಯಕ್ಷ ಎಂ.ಬಿ.ಬಿರಾದಾರ, ಎಸ್.ಬಿ.ಹಂಡರಗಲ್ ಮಾತನಾಡಿ, ರಾಜಕೀಯ, ಶೈಕ್ಷಣಿಕ, ಸರ್ಕಾರದ ಸೌಲಭ್ಯಗಳನ್ನು ಸಮಾಜದ ಮಕ್ಕಳಿಗೆ ದೊರಕಿಸಿಕೊಡುವ ಕುರಿತು ಚಿಂತನಾ ಗೋಷ್ಠಿಗಳು, ಸಂಘಟನೆಯನ್ನು ಬಲಗೊಳಿಸಲು ಈ ಸಮಾವೇಶ ನಡೆಯಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದ ಬಾಂಧವರು ಪಾಲ್ಗೊಳ್ಳಬೇಕು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಭೀಮನಗೌಡ ಬಿರಾದಾರ, ಬಾಲನಗೌಡ ಪಾಟೀಲ, ಚನ್ನಪ್ಪಗೌಡ ಹೊಸಗೌಡರ, ಹಣಮಗೌಡ ಪಾಟೀಲ, ಸಾಗರ ಹುನಕುಂಟಿ ಮೊದಲಾದವರು ಇದ್ದರು.