ಮುದ್ದೇಬಿಹಾಳ : ವಿಜಯಪುರದ ಇಟ್ಟಂಗಿ ಭಟ್ಟಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ಮೇಲಿ ಅಮಾನುಷವಾಗಿ ಹಲ್ಲೆಗೈದಿರುವ ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಮಾದಿಗ ಜನ ಸಂಘ ಹೋರಾಟ ವೇದಿಕೆ ಹಾಗೂ ದಲಿತಪರ ಸಂಘಟನೆಯ ಸದಸ್ಯರು ತಹಶೀಲ್ದಾರ್ಗೆ ಮಂಗಳವಾರ ಮನವಿ ಪತ್ರ ಸಲ್ಲಿಸಿದರು.
ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಶಿರಸ್ತೇದಾರ ಎಂ.ಎಸ್.ಬಾಗೇವಾಡಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಹೋರಾಟಗಾರ ಬಸವರಾಜ ಪೂಜಾರಿ, ಹಲ್ಲೆಕೋರರಿಂದ ಕಾರ್ಮಿಕರು ಜೀವನ್ಮರಣದ ಮಧ್ಯೆ ಹೋರಾಟ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.ಜಿಲ್ಲಾಡಳಿತ ಸಂತ್ರಸ್ಥ ಕಾರ್ಮಿಕರ ಕುಟುಂಬಕ್ಕೆ ಸರ್ಕಾರದಿಂದ ತಲಾ ೨೦ ಲಕ್ಷ ರೂ.ಪರಿಹಾರ ನೀಡಬೇಕು. ಆರೋಪಿಗಳನ್ನು ಬಾಗಲಕೋಟ,ವಿಜಯಪುರ ಜಿಲ್ಲೆಯಿಂದ ಗಡಿಪಾರು ಮಾಡಬೇಕು.ನೊಂದಿರುವ ಕುಟುಂಬಸ್ಥರಲ್ಲಿ ಒಬ್ಬರಿಗೆ ಸರ್ಕಾರದ ಸೇವೆಗೆ ನಿಯೋಜನೆ ಮಾಡಬೇಕು.ಇಟ್ಟಂಗಿ ಭಟ್ಟಿ ಮಾಲೀಕನ ಅನುಮತಿ ಪರವಾನಿಗೆ ರ್ದದ್ದುಗೊಳಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಅಧ್ಯಕ್ಷ ಮುತ್ತಪ್ಪ ಮಾದರ,ದುರುಗಪ್ಪ ಅಮರಗೋಳ, ರಾಜು ಅಮರಗೋಳ, ಸಂತೋಷ ಅಮರಗೋಳ, ಶ್ರೀಕಾಂತ ಹಂಡರಗಲ್ಲ, ಅಭಿಲಾಷ ಅಮರಗೋಳ, ಮಲ್ಲು ಮೂಲಿಮನಿ ಮೊದಲಾದವರು ಇದ್ದರು.