ಅಪ್ಪ ಸಾಹಿತ್ಯ ವೇದಿಕೆ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆ

ವಿಜಯಪುರ : ಐತಿಹಾಸಿಕ ವಿಜಯಪುರ ನಗರದಲ್ಲಿ ಫೆಬ್ರುವರಿ ೨ನೇ ತಾರೀಖದಂದು ನಗರದ ಚೇತನಾ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ನಡೆಯುವ ಕಪ್ಪತ್ತಗಿರಿ ಸಾಹಿತ್ಯ ಸಾಂಸ್ಕೃತಿಕ ಕಲಾ ವೇದಿಕೆಯ ವಿಜಯಪುರ ಜಿಲ್ಲಾ ಘಟಕದ ೨ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅಪ್ಪ ಸಾಹಿತ್ಯ ವೇದಿಕೆ ಉದ್ಘಾಟನೆಯಾಗುತ್ತಿದೆ.
ಅಪ್ಪ ಕಾವ್ಯೋತ್ಸವ ಕರುನಾಡು ಕಿರೀಟ ಪ್ರಶಸ್ತಿ ಪ್ರದಾನ ಹಾಗೂ ಎದ್ಯಾಗಿನ ಬ್ಯಾನಿ ಕೃತಿ ಲೋಕಾರ್ಪಣೆ ಸಮಾರಂಭದ ಅಮಂತ್ರಣ ಪತ್ರಿಕೆಯನ್ನು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಬಿಡುಗಡೆಗೊಳಿಸಿದರು.
ಜಿಲ್ಲಾಧಿಕಾರಿಯ ಕಾರ್ಯಾಲಯ ದಲ್ಲಿ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದ ಅವರು ವಿಜಯಪುರ ಜಿಲ್ಲೆ ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರದ ತವರೂರು ಮೇಲಿಂದ ಮೇಲೆ ಇಂತಹ ಅರ್ಥಪೂರ್ಣವಾದ ಕಾರ್ಯಕ್ರಮಗಳು ನಡೆಯಬೇಕೆಂದು ಹೇಳಿದರು. ಸಾಹಿತಿ ಪ್ರೊ. ಎ.ಎಚ್. ಕೊಳಮಲಿ, ಅಪ್ಪ ಸಾಹಿತ್ಯ ವೇದಿಕೆ ರಾಜ್ಯಾಧ್ಯಕ್ಷ ಶ್ರೀಮತಿ ಸುಜ್ಞಾನಿ ಪಾಟೀಲ, ಕಾರ್ಯದರ್ಶಿ ನಿಂಗನಗೌಡ ಪಾಟೀಲ, ಹೇಮಾ ಪಾಟೀಲ, ಈರಮ್ಮ ಬೋನೂರಮಠ ಹಾಗೂ ಕಪ್ಪತ್ತಗಿರಿ ಸಾಹಿತ್ಯ ಸಾಂಸ್ಕೃತಿಕ ಕಲಾ ವೇದಿಕೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.