ದಾಖಲೆ ಮೊತ್ತಕ್ಕೆ "ರಾಕ್ಷಸ" ತೆಲುಗು ಥಿಯೇಟರ್ ಹಕ್ಕು ಮಾರಾಟ

Jan 11, 2025 - 21:37
 0
ದಾಖಲೆ ಮೊತ್ತಕ್ಕೆ "ರಾಕ್ಷಸ" ತೆಲುಗು ಥಿಯೇಟರ್ ಹಕ್ಕು ಮಾರಾಟ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ 

ಕಂಚಿ ಕಾಮಾಕ್ಷಿ ಕೋಲ್ಕತ್ತಾ ಕಾಳಿ ಕ್ರಿಯೇಷನ್ ತೆಕ್ಕೆಗೆ ರಾಕ್ಷಸ ತೆಲುಗು ರೈಟ್ಸ್ ಸೇಲ್

ರಾಕ್ಷಸ ತೆಲುಗು ಹಾದಿ ಸುಗಮ | ಭಾರೀ ಮೊತ್ತಕ್ಕೆ ಹಕ್ಕು ಮಾರಾಟ 

ಪ್ರತಿ ಸಿನಿಮಾಗಳಲ್ಲಿಯೂ ಭಿನ್ನ ವಿಭಿನ್ನ ಪಾತ್ರಗಳ ಮೂಲಕ ರಂಜಿಸುವ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ರಾಕ್ಷಸ ಅವತಾರವೆತ್ತಿರುವುದು ಗೊತ್ತೇ ಇದೆ. ಅಂದರೆ ಈ ಚಿತ್ರದಲ್ಲಿ ಅವರು ಡಿಫರೆಂಟ್ ಗೆಟಪ್ ಧರಿಸಿದ್ದಾರೆ. ಶಿವರಾತ್ರಿ ಹಬ್ಬಕ್ಕೆ ತೆರೆಗೆ ಬರುತ್ತಿರುವ ರಾಕ್ಷಸ ಸಿನಿಮಾದಿಂದ ಮತ್ತೊಂದು ಅಪ್ ಡೇಟ್ ಸಿಕ್ಕಿದೆ. ತೆಲುಗಿನಲ್ಲಿಯೂ ಬಿಡುಗಡೆಯಾಗುತ್ತಿರುವ ಈ ಚಿತ್ರದ ಥಿಯೇಟರ್ ಹಕ್ಕನ್ನು ‌ಕಂಚಿ ಕಾಮಾಕ್ಷಿ ಕೋಲ್ಕತಾ ಕಾಳಿ ಕ್ರಿಯೇಷನ್ ತನ್ನದಾಗಿಸಿಕೊಂಡಿದೆ. ಅಖಂಡ ತೆಲುಗು ಪ್ರೇಕ್ಷಕರಿಗೆ ರಾಕ್ಷಸ ಸಿನಿಮಾವನ್ನು ಈ ಸಂಸ್ಥೆ ತಲುಪಿಸಲಿದೆ.

ಸಂತಸದಲ್ಲಿ ನಿರ್ಮಾಪಕರು :

"ಇತ್ತೀಚೆಗೆ ಕನ್ನಡ ಸಿನಿಮಾಗಳು ವ್ಯಾಪಾರವಾಗ್ತಿರುವುದೇ ಕಡಿಮೆ.  ಹೀಗಿದ್ದರೂ ಈಗಾಗಲೇ ಕನ್ನಡ ಥಿಯೇಟರ್ ರೈಟ್ಸ್ ಬಿಕರಿಯಾಗಿದೆ. ಈಗ ಬರೀ ಟೀಸರ್, ಟ್ರೇಲರ್, ಕಂಟೆಂಟ್ ನೋಡಿಯೇ ಕಂಚಿ ಕಾಮಾಕ್ಷಿ ಕೋಲ್ಕತಾ ಕಾಳಿ ಕ್ರಿಯೇಷನ್ ಒಳ್ಳೆ ಮೊತ್ತಕ್ಕೆ    ಹಕ್ಕನ್ನು ತಮ್ಮದಾಗಿಸಿಕೊಂಡಿದೆ. ಹಲವಾರು ಹೊಸತನಗಳನ್ನು ಹೊಂದಿರುವ ಈ ಸಿನಿಮಾ ಮೇಲೆ ಭರವಸೆಯಿಟ್ಟೇ ವಿತರಣೆ ಹಕ್ಕನ್ನು ಪಡೆದುಕೊಂಡಿದೆ. ಇದು ಸಂತಸ ತಂದಿದೆ" ಎಂದು ನಿರ್ಮಾಪಕರಾಗಿರುವ ದೀಪು ಬಿ.ಎಸ್ ಖುಷಿ ಹಂಚಿಕೊಂಡಿದ್ದಾರೆ. 

ಕಂಟೆಂಟ್ ಮೆಚ್ಚಿಕೊಂಡೇ ಕಂಚಿ ಕಾಮಾಕ್ಷಿ ಕೋಲ್ಕತಾ ಕಾಳಿ ಕ್ರಿಯೇಷನ್ ತೆಲುಗು ಥಿಯೇಟರ್ ಹಕ್ಕು ಖರೀದಿ ಮಾಡಿರುವುದು ಇದು ಚಿತ್ರತಂಡಕ್ಕೆ ಸಿಕ್ಕಿರುವ ಆರಂಭಿಕ ಗೆಲುವು ಎಂದರು ತಪ್ಪಾಗಲಿಕ್ಕಿಲ್ಲ. ಕನ್ನಡ ಭಾಷೆಯ ಥಿಯೇಟರ್ ಹಕ್ಕು ಹಾಗೂ ಆಡಿಯೋ ಹಕ್ಕು ಕೂಡ ಒಳ್ಳೆ ಮೊತ್ತಕ್ಕೆ ಬಿಕರಿಯಾಗಿದ್ದು, ಇಡೀ ರಾಕ್ಷಸ ಟೀಂ ಖುಷಿಗೊಂಡಿದೆ.

ರಾಕ್ಷಸ  ವಿಶೇಷವಾದ ಸಿನಿಮಾವಾಗಿದೆ.  ಇದು ಟೈಮ್ ಲೂಪ್ ಕಾನ್ಸೆಪ್ಟ್ ಇರುವ ಚಿತ್ರವೇ ಆಗಿದೆ. ಕನ್ನಡದಲ್ಲಿ ಈ ರೀತಿಯ ಚಿತ್ರ ಬಂದೇ ಇಲ್ಲ. ಮೊದಲ ಬಾರಿಗೆ ಈ ರೀತಿಯ ಚಿತ್ರ ಬರ್ತಿದೆ. ಮಮ್ಮಿ, ದೇವಕಿ ಚಿತ್ರಗಳನ್ನ ಡೈರೆಕ್ಟರ್ ಮಾಡಿರೋ ಲೋಹಿತ್ ಈ ರಾಕ್ಷಸ ಚಿತ್ರ ನಿರ್ದೇಶನ ಮಾಡಿದ್ದಾರೆ.

ಪ್ರಜ್ವಲ್ ಅವರು ಭಿನ್ನ ಗೆಟಪ್ ತಾಳಿರುವ ಈ ಸಿನಿಮಾದ ಪಾತ್ರವರ್ಗದಲ್ಲಿ ಶೋಭಾರಾಜ್, ವತ್ಸಲಾ ಮೋಹನ್, ಆರ್ನ ರಾಥೋಡ್, ಸಿದ್ಲಿಂಗು ಶ್ರೀಧರ್ ಮುಂತಾದ ಕಲಾವಿದರು ನಟಿಸಿದ್ದಾರೆ. ಚಿತ್ರದ ಶೇಕಡ 80ರಷ್ಟು ಚಿತ್ರೀಕರಣ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಮಾಡಲಾಗಿದೆ. ಇನ್ನುಳಿದ ದೃಶ್ಯಗಳ ಚಿತ್ರೀಕರಣವನ್ನು ರಾಮೇಶ್ವರಂ, ಗೋವಾ ಹಾಗೂ ಬೆಂಗಳೂರಿನಲ್ಲಿ ನಡೆಸಲಾಗಿದೆ.

‘ಶಾನ್ವಿ ಎಂಟರ್‌ಟೇನ್ಮೆಂಟ್’ ಮೂಲಕ ದೀಪು ಬಿ.ಎಸ್. ಅವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ನವೀನ್ ಮತ್ತು ಮಾನಸಾ ಕೆ. ಕೂಡ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ. ಜೇಬಿನ್ ಪಿ. ಜೋಕಬ್ ಅವರು ಈ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದಾರೆ. ವಿನೋದ್ ಅವರ ಸಾಹಸ ನಿರ್ದೇಶನ, ವರುಣ್ ಉನ್ನಿ ಅವರ ಸಂಗೀತ ನಿರ್ದೇಶನ, ಅವಿನಾಶ್ ಬಸುತ್ಕರ್ ಅವರ ಹಿನ್ನಲೆ ಸಂಗೀತ ಹಾಗೂ ರವಿಚಂದ್ರನ್ ಸಿ. ಅವರ ಸಂಕಲನ ಈ ಚಿತ್ರಕ್ಕಿದೆ. ಶಿವರಾತ್ರಿ ಹಬ್ಬದ ಸಮಯದಲ್ಲಿ ‘ರಾಕ್ಷಸ’ ಸಿನಿಮಾ ರಿಲೀಸ್ ಆಗಲಿದೆ. ಶಿವರಾತ್ರಿ ದಿನದಂದು ಪ್ರಜ್ವಲ್ ದೇವರಾಜ್ ಅವರ ಅಭಿಮಾನಿಗಳಿಗೆ ಥಿಯೇಟರ್ಗಳಲ್ಲಿ ಭರ್ಜರಿ ಮನರಂಜನೆ ಸಿಗಲಿದೆ.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.