ಪ್ರಗತಿಯಲ್ಲಿ ಹೊಸ ಕ್ರಾಂತಿ ಸೃಜಿಸುವ ಬಜೆಟ್ : ಕಾರಜೋಳ

ವಿಜಯಪುರ : ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಬಜೆಟ್ ದೇಶದ ಪ್ರಗತಿಯಲ್ಲಿ ಹೊಸ ಕ್ರಾಂತಿ ಸೃಷ್ಟಿಸಲಿದೆ. ೧೨ ಲಕ್ಷ ರೂ.ಗಳವರೆಗಿನ ಆದಾಯಕ್ಕೆ ಶೂನ್ಯ ತೆರಿಗೆ ವಿಧಿಸುವ ನಿರ್ಧಾರ ಕೈಗೊಂಡಿರುವುದು ಸ್ವಾತಂತ್ರದಲ್ಲಿ
ಮಧ್ಯಮ ವರ್ಗಕ್ಕೆ ನೀಡಿದ ಬಹುದೊಡ್ಡ ಕೊಡುಗೆಯಾಗಿದೆ, ಈ ಕೊಡುಗೆ ಪ್ರಸ್ತುತ ಬಜೆಟ್ನಲ್ಲಿ ಉಡುಗೊರೆಯಾಗಿ ದೊರಕಿದೆ. ಒಟ್ಟು ಬಜೆಟ್ನ ಶೇ.೨೦ ರಷ್ಟು ಭಾಗವನ್ನು ಬಂಡವಾಳ ಹೂಡಿಕೆಗೆ ವಿನಿಯೋಗಿಸಿ ಉದ್ಯೋಗ ಸೃಷ್ಟಿಗೆ ಆದ್ಯತೆ, ಜೀವ ರಕ್ಷಕ ಔಷಧಿಗಳ ಬೆಲೆ ಇಳಿಕೆ, ಶೈಕ್ಷಣಿಕ ಸಾಲದ ಮೇಲಿನ ತೆರಿಗೆ ಇಳಿಕೆ ಹೀಗೆ ಅನೇಕ ರೀತಿಯ ಉತ್ತಮ ನಿರ್ಧಾರಗಳನ್ನು ಬಜೆಟ್ನಲ್ಲಿ ಘೋಷಿಸಲಾಗಿದೆ. ಎಸ್.ಸಿ. -ಎಸ್ಟಿ ಮಹಿಳಾ ಉದ್ಯಮಿಗಳಿಗೆ ಉದ್ಯಮ ಆರಂಭಕ್ಕೆ ೨ ಕೋಟಿ ರೂ. ಸಾಲ ನೀಡುವ ಯೋಜನೆ ಮಹಿಳಾ ಉದ್ಯಮಿಗಳಿಗೆ ವರದಾನವಾಗಲಿದೆ. ಒಟ್ಟಾರೆಯಾಗಿ ಕೃಷಿ, ಉದ್ಯೋಗ ಸೃಷ್ಟಿ, ಕೈಗಾರಿಕಾ ಅಭಿವೃದ್ಧಿಯ ಎಲ್ಲ ವಲಯಗಳಿಗೂ ಆದ್ಯತೆ ನೀಡುವ ಮೂಲಕ ಅರ್ಥಪೂರ್ಣ ಬಜೆಟ್ ಮಂಡಿಸಲಾಗಿದೆ ಎಂದು ಭಾರತೀಯ ಜನತಾ ಪಕ್ಷ ಎಸ್.ಸಿ. ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.